ಬೆಂಗಳೂರಿಂದ-ಮಂಗಳೂರಿಗೆ ಬರುವವರನ್ನು ಯಾವಾಗಲೂ ಸೆಳೆಯುತ್ತದೆ ಶಿರಾಡಿ ಘಾಟ್ನ ಅರಣ್ಯ, ಅಲ್ಲಿನ ಇಕ್ಕೆಲಗಳಲ್ಲಿನ ಹೆಸರೇ ಅರಿಯದ ಗಿರಿ ಶಿಖರಗಳು.
ನಾನೂ ಅನೇಕ ಬಾರಿ ಆ ಗಿರಿಗಳ ಮೇಲೇರುವ ಕನಸು ಕಂಡದ್ದಿದೆ. ಶಿರಾಡಿ ಘಾಟಿಯ ಹಚ್ಚ ಹಸಿರಿನ ಸೆರಗಲ್ಲಿ ಹರಿಯುತ್ತದೆ ಕೆಂಪು ಹೊಳೆ. ಇದೀಗ ಈ ಹೊಳೆಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ ಮಿನಿ ಹೈಡ್ರೋ ಸ್ಥಾವರ ಸ್ಥಾಪನೆಯಾಗಿದೆ, ಒಂದಷ್ಟು ಹಸಿರನ್ನು ಈ ಸ್ಥಾವರ ನುಂಗಿ ಹಾಕಿದ್ದೂ ಇದೆ.
ಆದರೂ ಪ್ರಕೃತಿಯ ಸಹಚರ್ಯ ಬಯಸುವವರಿಗೆ ಶಿರಾಡಿಯ ಕಾಡು ಬೆಟ್ಟ ಯಾವಾಗಲೂ ಚೇತೋಹಾರಿ. ಇಲ್ಲಿಗೆ ನಡೆದು ನೋಡುವ ಕಾರ್ಯಕ್ರಮವೊಂದನ್ನು ಮಂಗಳೂರಿನ ಚಾರಣಿಗ ಮಿತ್ರ ದಿನೇಶ್ ಹೊಳ್ಳ ಆಯೋಜಿಸಿದ್ದರು. ಮಂಗಳೂರಿನಿಂದ ೨೧ ಮಂದಿಯ ತಂಡ ಹೊರಟಿತು ಶಿರಾಡಿಯತ್ತ. ಮಂಗಳೂರಿನಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಹಾಗಾಗಿ ನಾವು ಹೋಗಬೇಕು ಎಂದಿದ್ದ ಶಿಖರ ‘ವೆಂಕಟಗಿರಿ’ ಹೋಗುವುದು ಸಾಧ್ಯವೇ ಎಂಬ ದಿಗಿಲೂ ನಮ್ಮಲ್ಲಿತ್ತು. ಮಳೆ ಇದ್ದರೆ ಗುಂಡ್ಯದ ರೈಲ್ವೇ ಹಳಿಯಲ್ಲಿ ನಡೆಯುವುದು ಎಂದು ನಿರ್ಧರಿಸಿ ಹೊರಟೆವು.
ಅಚ್ಚರಿ ಎಂದರೆ ನಾವು ಶಿರಾಡಿ ತಲಪುವಾಗ ಮಳೆ ಮಾಯ! ಗುಂಡ್ಯದಿಂದ ಬಲಕ್ಕೆ ತಿರುಗಿ ಸುಬ್ರಹ್ಮಣ್ಯಕ್ಕೆ ಹೋಗುವ ದಾರಿಯಲ್ಲಿ ಮುಂದುವರಿದೆವು. ಅಲ್ಲಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆ ಎಡಕ್ಕೆ ಕವಲೊಡೆವ ಸಪುರ ರಸ್ತೆಯ ಸಮೀಪವೇ ಮಹೀಂದ್ರ ಟೆಂಪೊ ನಿಲ್ಲಿಸಿ, ಅಲ್ಲಿಂದ ವೆಂಕಟಗಿರಿಗೇ ಚಾರಣ ಆರಂಭ.
ಮೇ ತಿಂಗಳಾದ್ದರಿಂದ ಇನ್ನೂ ಅಲ್ಲಲ್ಲಿ ಗೇರು ಹಣ್ಣು. ಹಣ್ಣು ತಿಂದು ಬೀಜ ಅಲ್ಲೇ ಇರಿಸಿ ಮುಂದುವರಿದೆವು. ಅಕಾಲಿಕ ಮಳೆಯಾದ್ದರಿಂದ ತೋಡುಗಳಲ್ಲಿ ಕೆನ್ನೀರು ಹರಿಯುತ್ತಿತ್ತು. ಒಣಗಿದ್ದ ಮರಗಳೆಲ್ಲಾ ತೊಳೆದ ಹಾಗೆ ಕಾಣುತ್ತಿದ್ದವು, ಅಲ್ಲಲ್ಲಿ ಮತ್ತೆ ಹಸಿರು ಕಾಣುತ್ತಿತ್ತು. ಊರಿನವರೇ ಆದ ರಾಜಶೇಖರ್ ಅಲಿಯಾಸ್ ರಾಜಣ್ಣ ನಮಗೆ ಲೋಕಲ್ ಗೈಡ್.
ದೂರದಿಂದ ಎತ್ತರದಲ್ಲಿ ನಮ್ಮ ಚಾರಣ ತಾಣ ವೆಂಕಟಗಿರಿಯ ಬೋಳು ನೆತ್ತಿ ಕೈಬೀಸಿ ಕರೆಯುತ್ತಿತ್ತು.
ಸುಮಾರು ಅರ್ಧ ಗಂಟೆಯ ಪ್ರಯಾಣ ಮಾಡಿ ಊರಿನ ಮನೆಗಳ ನಡುವೆ ಸಾಗುತ್ತಾ ಕಾಡಿನ ಮಡಿಲು ಪ್ರವೇಶಿಸಿದ ನಾವು ಮಂಗಳೂರು-ಬೆಂಗಳೂರು ರೈಲ್ವೇ ಟ್ರಾಕ್ ಸೇರಿದೆವು. ಬೃಹತ್ ಸುರಂಗಮಾರ್ಗವೊಂದು ಅಲ್ಲೇ ಇತ್ತು. ಪಕ್ಕದಲ್ಲೇ ನೀರಿನ ತೋಡು.
ಮೋಡ ಕವಿದಿದ್ದರಿಂದ ಎಲ್ಲರಿಗೂ ಬೆವರು. ಅಲ್ಲೇ ಹಳಿಯ ಪಕ್ಕ ಕುಳಿತು ಒಂದಷ್ಟು ದಣಿವಾರಿಸಿದೆವು. ಬೆಂಗಳೂರಿನತ್ತ ಮುಖಮಾಡಿ ನಿಂತರೆ ಅದುರಿಗೆ ಸುರಂಗ, ಅದರ ಎಡ ಪಕ್ಕದಲ್ಲೇ ಒಂದು ಕಾಡು ದಾರಿ ಮುಂದುವರಿಯುತ್ತದೆ, ಅದರಲ್ಲಿ ಸಾಗಿದರೆ ಅರಣ್ಯ ಇಲಾಖೆಯವರು ರಚಿಸಿದ ಕಲ್ಲಿನ ಗುಪ್ಪೆಯೊಂದು ಸಿಗುತ್ತದೆ. ಕಲ್ಲಿನ ಗುಪ್ಪೆಗೆ ಎದುರೇ ಸಿಕ್ಕುವ ಕಾಲು ಹಾದಿಯೇ ನಮ್ಮ ಚಾರಣದ ಹಾದಿ. ದಾರಿಯಲ್ಲಿ ಹೇರಳವಾಗಿ ಕಂಡು ಬಂದದ್ದು ನಮಗೆ ಆನೆ ಲದ್ದಿ, ಆದರೆ ಆನೆ ಮಾತ್ರ ಎಲ್ಲೂ ನೋಡಲು ಸಿಗಲಿಲ್ಲ. ಅಥವಾ ನಮ್ಮ ತಂಡವನ್ನು ನೋಡಿ ಬೆದರಿ ದೂರ ಹೋಗಿರಲೂ ಬಹುದು. ಇದ್ದರೂ ನಮಗೆ ಕಾಣದಿರಬಹುದು. ಆದರೆ ಈ ಭಾಗದಲ್ಲಿ ಆನೆಗಳ ಗುಂಪೇ ಸಂಚರಿಸುತ್ತದೆ ಎಂಬ ಮಾಹಿತಿ ನಮಗೆ ನೀಡಿದ ರಾಜಣ್ಣ.

ಅಗಾಗ ಮಳೆಹನಿ, ತೇವಗೊಂಡ ಹುಲ್ಲು ತುಂಬಿದ ನೆಲ, ಮೇಲೆ ಹೋದಂತೆ ಕಾಡಕಿಚ್ಚು ಬಿದ್ದು ಸುಟ್ಟ ಮರ, ಹುಲ್ಲಿನ ಗಡ್ಡೆ ಕಂಡುಬಂದವು, ಮಳೆಯಾದ್ದರಿಂದ ಮರ, ಹುಲ್ಲು ಮತ್ತೆ ಚಿಗುರತೊಡಗಿದ್ದವು. ಎಡಕ್ಕೆ ನೋಡಿದರೆ ದಟ್ಟ ಅರಣ್ಯ, ಬಲಕ್ಕೆ ನೋಡಿದರೆ ಹತ್ತಿಯಂಥ ಮೋಡ ಹೊದ್ದು ಮುಗುಮ್ಮಾಗಿ ಕುಳಿತಿದೆ ‘ಮುಗಿಲಗಿರಿ’ ಶಿಖರ. ಎಲ್ಲಾ ಕಾಲದಲ್ಲೂ ಒಂದಷ್ಟು ಮೋಡಗಳನ್ನು ತನ್ನ ಹತ್ತಿರವೇ ಇರಿಸುವ ಕಾರಣ ಆ ಹೆಸರು ಪಡೆದುಕೊಂಡಿದೆ ಮುಗಿಲಗಿರಿ ಎಂಬ ಮಾಹಿತಿಕೊಡುತ್ತಾರೆ ದಿನೇಶ್ ಹೊಳ್ಳ.
ಗುಡ್ಡ ಏರುತ್ತಾ ಹೋದಂತೆ ಮರಗಳು ಕಡಮೆಯಾದವು, ಅಲ್ಲೊಂದು ಇಲ್ಲೊಂದು ನೆಲ್ಲಿ ಮರಗಳು. ಕೆಲವದರಲ್ಲಿ ಇನ್ನೂ ನೆಲ್ಲಿಕಾಯಿ ಉಳಿದಿತ್ತು. ನಮ್ಮಲ್ಲಿನ ‘ಹುಡುಗುಬುದ್ಧಿ’ ಕಲ್ಲು ಎಸೆಯುವಂತೆ ಪ್ರೇರೇಪಿಸದೆ ಇದ್ದೀತೇ, ದೊಡ್ಡವರೂ ಚಿಕ್ಕವರಾಗಿ ನೆಲ್ಲಿಕಾಯಿ ಉದುರಿಸಿದೆವು. ನೆಲ್ಲಿಕಾಯಿ ಸವಿಯುತ್ತ, ಅದರ ಮೇಲೆ ನೀರು ಕುಡಿದು ಆ ಸಿಹಿ ಅನುಭವಿಸುತ್ತಾ ಹೋಗುವಾಗ ಆಯಾಸ ಪರಿಹಾರ. ವೆಂಕಟಗಿರಿಯ ತುದಿಯೂ ಹತ್ತಿರವಾಗುತ್ತಿತ್ತು.
ಸುತ್ತ ನೋಡಿದರೆ ಬೇರೆ ಬೇರೆ ಶಿಖರ ಸಾಲು. ಅಮೇದಿಕಲ್ಲು, ಎತ್ತಿನಭುಜ, ಗಡಾಯಿಕಲ್ಲು, ಮಿಂಚುಕಲ್ಲು, ಇನ್ನೂ ಹಲವಾರು, ಕೆಳಗೆ ನೋಡಿದರೆ ಹಾವಿನಂತೆ ಕಾಣುವ ಕೆಂಪುಹೊಳೆ, ಅದರ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ ೪೮.
ಸುಮಾರು ಮೂರು ಗಂಟೆಯ ಚಾರಣ ಸಾಕು ವೆಂಕಟಗಿರಿ ತಲಪಲು. ಶೇ.೯೦ರಷ್ಟು ಸುಲಭ ಚಾರಣವಾದರೆ, ಕೊನೆಯಲ್ಲಿ ಶಿಖರ ತಲಪುವಾಗ ಒಂದಷ್ಟು ಏದುಸಿರು ಖರ್ಚಾಗುತ್ತದೆ!
ಮೇಲೆ ತಲಪಿದರೆ ಬೋಳುಗುಡ್ಡ, ಒಂದೆರಡು ಕಲ್ಲಿನಗುಪ್ಪೆ, ಬಿರುಬೀಸು ಗಾಳಿ, ಅಷ್ಟೇ ಲಭ್ಯ. ಅದು ಬಿಟ್ಟರೆ ಸುತ್ತಲಿನ ಪ್ರಕೃತಿಯ ರಮ್ಯನೋಟ.
ಮಧ್ಯಾಹ್ನದ ಊಟಕ್ಕಾಗಿ ತಂದಿದ್ದ ಮೂಡೆ (moode) ಹೊಟ್ಟೆಗಿಳಿಸಿ, ಮತ್ತೆ ಕೆಳಕ್ಕಿಳಿದೆವು. ಕಲ್ಲುಗಳು ಬುಡ ಹಸಿಯಾದ ಕಾರಣ ಅಲುಗಾಡುತ್ತಿದ್ದು, ಎಚ್ಚರಿಕೆಯಿಂದ ಇಳಿಯಬೇಕಿತ್ತು, ಹಾಗಾಗಿ ಇಳಿಯಲೂ ಅಷ್ಟೇ ಸಮಯ ಬೇಕು.
ಇಳಿಯುವಾಗಲೂ ನಮ್ಮನ್ನು ಆಕರ್ಷಿಸುತ್ತಿದ್ದುದು, ಆ ಕಾಡು, ಆ ಬಿದ್ದ ತರಗೆಲೆ, ಮೋಡ ಕವಿದ ಮುಗಿಲಗಿರಿ, ಬೋಳು ತುದಿಯ ವೆಂಕಟಗಿರಿ.......
ಚಿತ್ರ : ಸುನಿಲ್