Sunday, May 18, 2008

ಮೇ ತಿಂಗಳ ಮೋಡಗಳು

ಬೇಸಗೆ ರಜೆಗೆ ಮಕ್ಕಳು ಸಾಲಾಗಿ
ಪ್ರವಾಸ ಹೊರಟಂತೆ
ಎತ್ತಲೋ ಹೊರಟಿವೆ
ಮೇ ತಿಂಗಳ ಮೋಡಗಳು

ಬತ್ತಿ ಒಡೆದ ಗದ್ದೆ ನೋಡುತ್ತ
ಕುಳಿತ ರೈತನ ಮುಂದೆ
ಅದೋ ಠೀವಿಯಿಂದ
ನಾಲ್ಕೇ ನಾಲ್ಕು ಹನಿ ಪನ್ನೀರು!

ಪೂರ್ತಿ ಮಳೆ ಸುರಿಸಲು ಈಗ
ಮೋಡಗಳಿಗಿಲ್ಲ ಸಮಯ

ಎತ್ತಲೋ ಪ್ರವಾಸ ಹೊರಟಿವೆ ನೋಡಿ

ಪಾತಾಳ ತಲಪಿರುವ
ಬಾವಿ ನೀರು ಪಾಚಿಗಟ್ಟಿದೆ
ಎಂದು ದೂರುವವರಿಗೆ,
ಪಟ್ಟಣದ ಪೈಪುಗಳಲ್ಲಿ ನೀರೇ
ಹರಿಯುತ್ತಿಲ್ಲ ಎಂಬ ನೀರೆಯರಿಗೆ
ಮೇಲಿಂದಲೇ ಅಣಕಿಸುತ್ತಾ
ಮೋಡ ಓಡೋಡಿ ಸಾಗಿದೆ

ನಗರದ ಗಗನಚುಂಬಿಗಳ
ಹಾದು
ವಲಸೆ ಹಕ್ಕಿಗಳ ರೆಕ್ಕೆ
ಚುಂಬಿಸುತ್ತಾ
ಬೆಳ್ಳಕ್ಕಿಗಳಂತೆ
ಹಾರಿವೆ ಮೇ ತಿಂಗಳ ಮೋಡಗಳು

ಇಂದು ರಾತ್ರಿ
ಅಥವಾ ನಾಳೆ ಘಟ್ಟ
ದಾಟಲಾರದೆ ಮಳೆ ಸುರಿಯಬಹುದು

Sunday, May 11, 2008

ಅಮ್ಮ ಎಂಬ ಸಂಜೀವಿನಿ

ಕತ್ತಲಮೂಲೆಯಲ್ಲಿ
ದುಃಖವನ್ನೇ ಹೊದ್ದು
ಮಲಗಿದ್ದ ನನ್ನ
ಮೌನವನ್ನೇ ಹೆಕ್ಕಿ
ಅರಗಿಸಿಕೊಳ್ಳುತ್ತಾಳೆ
ಬಿಕ್ಕುವ ಮನಕ್ಕೆ
ಸದಾ ಸಂಜೀವಿನಿ ನನ್ನಮ್ಮ!

ಅಗಲ ಮುಖ, ಸುಕ್ಕು
ಗಟ್ಟಿದ ಚರ್ಮ
ನಸುವೇ ಹರಡಿದೆ ಕುಂಕುಮ
ಆಕೆಯ ಬಟ್ಟಲು ಕಂಗಳೇ
ನನಗೆ ಲಾಲಿ ಹಾಡುವ ಚಂದ್ರಮ

ದೇವರಕೋಣೆಯಲ್ಲಿ ಅಮ್ಮನ ಪೂಜೆ
ಮುಖತುಂಬಾ ದೀಪದ ಬೆಳಗು
ಕೋಣೆಯಿಂದ ನಸುನಸುವೇ
ಹರಡುತ್ತಾ ಬರುವ
ಅಗರಬತ್ತಿಯ ಪರಿಮಳ
ದೇವರಿಗೆ ನೈವೇದ್ಯದ ಕಲ್ಲುಸಕ್ಕರೆ
ಮಕ್ಕಳಿಗೆ ಮನತುಂಬಿದ ಅಕ್ಕರೆ

ಅಮ್ಮನ ದಿನ ಎಂಬ ದಿನ ಮಾತ್ರ ಆಕೆಯನ್ನು ನೆನಪಿಸಬೇಕೇ?
ಇಲ್ಲ ಯಾವಾಗಲೂ ನೆನಪಿಸಬೇಕು...ಅದೇನೋ ಸರಿ.... ಆದರೆ ಅಮ್ಮನ ದಿನ ಎಂಬ ವಿಶೇಷ ಅವಕಾಶ ಸಿಕ್ಕರೆ ಅಂದೂ ವಿಶೇಷವಾಗಿ ಸ್ಮರಿಸಿಕೊಂಡರೆ ನಷ್ಟವೇನು?
ಅದಕ್ಕೇ ಈ ನಾಲ್ಕು ಸಾಲು ನನ್ನ ಹೆತ್ತಬ್ಬೆಗೆ.....

Wednesday, April 23, 2008

ಅಮ್ಮ ಮಿಸ್ಸಾದ ಫಜೀತಿ

ಹಳ್ಳಿಯಿಂದ ಪಟ್ಟಣಕ್ಕೆ ಬಂದು ಕೆಲವರ್ಷಗಳಾದರೂ ಅಮ್ಮ ಇಂದಿಗೂ ಪೇಟೆಗೆ ಹೊಂದಿಕೊಂಡವಳಲ್ಲ ಎಂದೇ ಹೇಳಬಹುದು....

ಮೊನ್ನೆ ಊರಲ್ಲಿ ಅಜ್ಜಿಯ ತಿಥಿಗೆಂದು ಅಮ್ಮ ಹೊರಟಳು. ಕಚೇರಿ ಕೆಲಸದೊತ್ತಡದ(ಯಾವಾಗಲೂ ಅದೇ ಕಾರಣ) ಜತೆಗೆ ಜ್ವರವೂ ಇದ್ದ ಕಾರಣ ನನಗೆ ಹೋಗಲಾಗುವುದಿಲ್ಲ ಎಂದು ನಾನು ಹೊರಡಲು ನಿರಾಕರಿಸಿದೆ.
ಅಜ್ಜಿಮನೆಯಲ್ಲಿ ಏನಾದರೂ ಕಾರ್ಯಕ್ರಮ ನಡೆದಾಗ ನಾನು ಹೋಗಲಾಗದಿದ್ದರೆ ಮಂಗಳೂರಿಂದ ಸುಮಾರು ೩೫ ಕಿ.ಮೀ ದೂರದ ಕಾಸರಗೋಡು ಜಿಲ್ಲೆಯ ಹೊಸಂಗಡಿಯಲ್ಲಿರುವ ಚಿಕ್ಕಪ್ಪ ಚಿಕ್ಕಮ್ಮನೊಂದಿಗೆ ಅವರ ಆಮ್ನಿಯಲ್ಲಿ ಅಮ್ಮ ಅಜ್ಜಿಯ ಮನೆಗೆ ಹೋಗುವುದು, ಅಲ್ಲಿ ಎರಡು ದಿನ ಕಳೆದು, ಚಿಕ್ಕಮ್ಮನೊಂದಿಗೆ ಮರಳುವುದು, ಅವರು ಅಮ್ಮನನ್ನು ಹೊಸಂಗಡಿಯಿಂದ ಮಂಗಳೂರು ಎಕ್ಸ್‌ಪ್ರೆಸ್ ಬಸ್ಸಿಗೆ ಹತ್ತಿಸುವುದು ಅನೇಕ ಬಾರಿ ನಡೆದ ಪ್ರಸಂಗಗಳು. ಅಲ್ಲಿ ಯಾವ ಬಸ್ಸಿಗೆ ಅಮ್ಮ ಏರಿದ್ದಾರೆ ಎಂಬುದನ್ನು ಚಿಕ್ಕಮ್ಮ ನನಗೆ ಫೋನಲ್ಲಿ ತಿಳಿಸಿದರೆ, ಸಮಯಕ್ಕೆ ಸರಿಯಾಗಿ ನಾನು ಮಂಗಳೂರು ಬಸ್‌ ನಿಲ್ದಾಣಕ್ಕೆ ಹೋಗಿ ಆ ಬಸ್ಸಿಂದ ಅಮ್ಮ ಇಳಿದ ಬಳಿಕ ನಮ್ಮ ಮನೆ ಸುರತ್ಕಲ್‌ನತ್ತ ಹೋಗುವ ಬಸ್‌ಗೆ ಹತ್ತಿಸಿದರಾಯಿತು, ಅವಳು ಸ್ಟಾಪಲ್ಲಿ ಇಳಿಯುತ್ತಾಳೆ.
ಮನೆ ಸ್ಟಾಪಲ್ಲಿ ಇಳಿಯಲು ಅವಳಿಗೆ ಕಷ್ಟವಾಗದು, ಆದರೆ ಮಂಗಳೂರಿನ ಜನಜಂಗುಳಿಯಲ್ಲಿ ಸುರತ್ಕಲ್ ಬಸ್ ಹಿಡಿಯುವ ಕೆಲಸ ನನ್ನಿಂದಾಗದು ಎಂದು ಯಾವಾಗಲೂ ಹೇಳುತ್ತಿರುತ್ತಾಳೆ.
ಹಾಗೆಯೇ ಮೊನ್ನೆಯೂ ಚಿಕ್ಕಪ್ಪ ಫೋನ್‌ ಮಾಡಿ ಸಂಜೆ ೫-೧೫ಕ್ಕೆ ಹೊಸಂಗಡಿಯಿಂದ ವೈಶಾಖ್ ಬಸ್ಸಲ್ಲಿ ಅಮ್ಮ ಹೊರಟಿದ್ದಾರೆ ಎಂದು ಹೇಳಿದರು. ಹೊಸಂಗಡಿಯಿಂದ ಮುಕ್ಕಾಲು ಗಂಟೆ ದಾರಿ ಮಂಗಳೂರಿಗೆ. ಹಾಗೆ ೬ ಗಂಟೆಗೆ ಹೊರಟು ಮಂಗಳೂರು ಸರ್ವಿಸ್ ಬಸ್ ನಿಲ್ದಾಣಕ್ಕೆ ಹೋದೆ, ಆಗಲೇ ಒಂದು ವೈಶಾಖ್ ಬಸ್ ನಿಂತಿತ್ತು, ಕಂಡಕ್ಟರ್‌ಗೆ ಕೇಳಿದರೆ ಅದು ಬಂದು ಆಗಲೇ ೧೦ ನಿಮಿಷ ಕಳೆದಿದೆ. ಅಷ್ಟು ಬೇಗ ಬಂದಿರಲು ಸಾಧ್ಯವಿಲ್ಲ, ಹೊಸಂಗಡಿಯಲ್ಲಿ ೫.೧೫ಕ್ಕೆ ಪಾಸಾಗುವ ಇನ್ನೊಂದು ವೈಶಾಖ್ ಇದೆಯೇ ಕೇಳಿದೆ, ಹೌದು, ಅದು ಇನ್ನೊಂದೈದು ನಿಮಿಷದಲ್ಲಿ ಬರಬಹುದು ಎಂದ.
ಬಸ್‌ಗಳ ಬೋರ್ಡ್ ನೋಡುತ್ತಾ ನಿಂತಿದ್ದೆ, ಎರಡನೇ ವೈಶಾಖ್ ಕೂಡಾ ಬಂತು, ಆದರೆ ಅದರಲ್ಲಿ ಅಮ್ಮ ಇಲ್ಲ!
ಮತ್ತೆ ಚಿಕ್ಕಪ್ಪನಿಗೆ ಫೋನ್ ಮಾಡಿ ಅಮ್ಮ ಬಂದಿಲ್ಲ ಎಂದೆ.
ಈಗ ಗೊಂದಲಕ್ಕೊಳಗಾಗುವುದು ಚಿಕ್ಕಪ್ಪನ ಸರದಿ.. ನಾನು ಹತ್ತಿಸಿದ ಬಸ್‌ ವೈಶಾಖವೋ ವೈಶಾಲಿಯೋ ಎಂದು ಅವರಿಗೂ ಕನ್‌ಫ್ಯೂಶನ್. ನೋಡೋಣ ಎಂದು ಮತ್ತಷ್ಟು ಹೊತ್ತು ಕಾದೆ, ಇನ್ನೋರ್ವ ಬಸ್ ಕಂಡಕ್ಟರ್‌ನಲ್ಲಿ ವೈಶಾಲಿ ಬಸ್ ಬಂತೇ ಕೇಳಿದೆ, ಅದು ಬಂದೂ ಆಗಿದೆ ಮರಳಿ ಕಾಸರಗೋಡಿನತ್ತ ಹೋಗಿಯೂ ಆಗಿದೆ ಎಂದ. ಮತ್ತೆ ವಿಚಾರಿಸಿದೆ, ಇನ್ನೊಂದು ವೈಶಾಲಿ ಮಂಗಳೂರಿನ ಒಳಕ್ಕೆ ಬರುವುದೇ ಇಲ್ಲ, ಹೊರಗಿನ ಕಂಕನಾಡಿ ಬಸ್ಟಾಂಡಿಗೆ ಬರುತ್ತೆ ಎಂಬ ಹೆಚ್ಚು‘ವರಿ’ ಮಾಹಿತಿಯನ್ನೂ ಕೊಟ್ಟ.
ಬೈಕೇರಿ ಕಂಕನಾಡಿಗೆ ಓಡಿಸಿ ಅಲ್ಲೂ ಬಸ್ಟಾಂಡ್‌ಗೆ ಹೋದರೆ ವೈಶಾಲಿಯಿಲ್ಲ, ಅಮ್ಮನೂ ಕಾಣುವುದಿಲ್ಲ...ಆಗಲೇ ಕತ್ತಲೆ ಕವಿದಿತ್ತು ಮೋಡ ಬೇರೆ ಆವರಿಸಿತ್ತು.
ಅಮ್ಮನಿಗೆ ನನ್ನ ಮೊಬೈಲ್ ನಂಬರ್‍ ಅಂತೂ ನೆನಪಿಲ್ಲ, ಏನ್ ಮಾಡೋದು ಎಂದೆಲ್ಲಾ ಚಿಂತಿಸುತ್ತಿದ್ದೆ. ಪಕ್ಕದ ಮನೆಯ ಹುಡುಗ ತೇಜಸ್ವಿಗೆ ಫೋನ್ ಮಾಡಿ ಎಲ್ಲಾದರೂ ಅಮ್ಮ ಸ್ವತ: ಬಸ್ಸೇರಿ ಬಂದರೇ ಎಂದು ವಿಚಾರಿಸಿದರೆ ಬಂದಿಲ್ಲ ಎಂಬ ಉತ್ತರ.
ಈಗ ನಿಜಕ್ಕೂ ನನ್ನ ಬೆವರಿಳಿಯಲು ಶುರುವಾಯ್ತು. ಗೊಂದಲದಲ್ಲಿ ಅಮ್ಮನ ಬೆದರುಕಂಗಳು ನನ್ನ ಕಣ್ಣಮುಂದೆ. ಮತ್ತೆ ಸರ್ವಿಸ್ ಬಸ್ ನಿಲ್ದಾಣಕ್ಕೆ ಬಂದೆ, ಅಲ್ಲೂ ಅಮ್ಮನಿಲ್ಲ.
ಪೊಲೀಸರಿಗೆ ದೂರು ಕೊಡೋದೇ, ಗೆಳೆಯರನ್ನು ಕರೆಯುವುದೇ, ಏನ್‌ ಮಾಡೋದು? ತಲೆ ಗೋಜಲು ಗೋಜಲು.
ದಾರಿ ಕಾಣದವರನ್ನು ಮತ್ತಷ್ಟು ದಾರಿ ತಪ್ಪಿಸಿ ಕೀಳುವವರು ನೆನಪಾದರು...ದಾರಿ ತಪ್ಪಿ ಯಾವ್ಯಾವದೋ ಬಸ್ ಏರಿ ಕಂಗಾಲಾದವರು ಸ್ಮರಣೆಗೆ ಬಂದರು...ಅವರಂತೆಯೇ ಅಮ್ಮನೂ ಹೋದದ್ದಿರಬಹುದೇ?
ಅನ್ಯಮನಸ್ಕನಾಗಿ ಬಸ್‌ ನಿಲ್ದಾಣದ ತುಕ್ಕು ಹಿಡಿದ ಕಂಬಕ್ಕೊರಗಿ ನಿಂತಿದ್ದೆ ಮೊಬೈಲ್ ಕೂಗಿತು. ಪಕ್ಕದ ಮನೆ ತೇಜಸ್ವಿಯ ಸ್ವರ...‘ಅಮ್ಮ ಬಂದಿದ್ದಾರೆ, ಈಗಷ್ಟೇ ಮಾತಾಡಿ ಬಂದೆ’.
ಥ್ಯಾಂಕ್ಸ್ ಹೇಳಿ, ಮನೆಗೆ ಫೋನಾಯಿಸಿದೆ, ಅಮ್ಮ ರಿಸೀವ್ ಮಾಡಿದಳು. ‘ನಾನು ಬಂದು ನಿನ್ನ ಹುಡುಕಿದೆ, ನೀ ಕಾಣ್ಲಿಲ್ಲ...ಸುರತ್ಕಲ್‌ ಬಸ್ ಗೊತ್ತಾತು, ಹಾಗೆ ಬಂದು ಬಿಟ್ಟೆ..’
ಏನು ಉತ್ತರಿಸುವುದು ಗೊತ್ತಾಗಲಿಲ್ಲ...ಹಾಗೇ ಫೋನಿಟ್ಟು ಆಫೀಸಿಗೆ ಗಾಡಿ ಓಡಿಸಿದೆ.

Thursday, April 17, 2008

ಗುಬ್ಬಿ ಇಲ್ಲದ ಗೂಡು

ಈಚೆಗೆ ಎಲ್ಲವೂ ಸರಿ ಇಲ್ಲ
ಮನೆಮೂಲೆಯ
ಕುಂಡದ ಗಿಡ ಮಂಕು ಹಿಡಿದು
ಕೂತುಬಿಟ್ಟಿದೆ, ಹೂ ಅರಳುವುದೇ ಇಲ್ಲ
ಮನದ ವೇದಿಕೆಯಲ್ಲಿ
ನಿನ್ನ ಬಿಂಬಗಳು ಈಚೆಗೆ ನರ್ತಿಸುವುದೂ ಇಲ್ಲ

ಒಡಲಾಳದಲ್ಲಿ ಶಬ್ದಗಳು
ಕವಿತೆಯಾಗಲು ಹಿಂಜರಿಯುತ್ತಿವೆ
ಗೋಡೆಗಡಿಯಾರದ ಎಡೆಯಲ್ಲಿ
ಗೂಡುಕಟ್ಟಿದ್ದ ಗುಬ್ಬಿ
ಹಾರಿಹೋಗಿ ತಿಂಗಳುಗಳೆ ಕಳೆದಿವೆ
ಈಗಂತೂ ಆ ಗೂಡಲ್ಲಿ ಜಿರಲೆಗಳ ಹರಿದಾಟ

ಅಬ್ಬರದಲ್ಲಿ ಹರಿವ ತೊರೆಯಲ್ಲಿ
ಚಪ್ಪಲಿ ಕಳೆದು ಹೋದಾ‌ಗ
ದಿಗಿಲಿನಿಂದ ನೋಡುವ ಹುಡುಗ ನಾನಾಗಿದ್ದೇನೆ
ಥತ್...ಈಚೆಗೆ ಯಾವುದೂ ಸರಿ ಎನಿಸುವುದಿಲ್ಲ...

ಮೇಲ್ನೋಟಕ್ಕೆ ಮೌನದ
ಮೇಲೊಂದು ಹುಸಿನಗುವಿನ ತೆರೆ ಬಿದ್ದಿದೆ
ಚಿಂತೆಯ ಕಾರ್ಮೋಡ ಕರಗಿಸಲು
ಉತ್ಸಾಹದ ಬಿರುಗಾಳಿ
ವೃಥಾ ಯತ್ನಿಸುತ್ತಿದೆ
ಪ್ರಯತ್ನಗಳು ಕೈಗೂಡುತ್ತಿಲ್ಲ

ನೀನು ಇಲ್ಲವಾದರೂ ಪರವಾಗಿಲ್ಲ
ಕುಂಡದ ಗಿಡ ಹೂಬಿಟ್ಟರೆ,
ಗುಬ್ಬಿ ಗೂಡಿಗೆ ಮರಳಿದರೆ
ಶಬ್ದಗಳು ಮತ್ತೆ ಕವಿತೆಗಳಾದರೆ ಸಾಕು
ನೀನೆ ಬೇಕೆಂದಿಲ್ಲ....

Thursday, April 10, 2008

ಉಗ್ರಗಾಮಿಗಳು

ತಿದಿಯೊತ್ತುವಾಗ ಭಗ್ಗನೇ
ಉರಿದೇಳುವ ಬೆಂಕಿಚೆಂಡು
ಗುರಿ ಉಡಾಯಿಸಲು
ನುಗ್ಗುವ ಕ್ಷಿಪಣಿಯಂತೆ
ಬೆದರಿಸುತ್ತಾರೆ ಭಯೋತ್ಪಾದಕರು
ಸದಾ ಸಿಡಿಗುಂಡು
ಮುಂದಿರುವುದೇನು?
ಯಾಕೆ ಈ ಪಾಪ?
ಪಾಪ, ಮಗುವಲ್ಲವೇ ಬಿಟ್ಟುಬಿಡೋಣ..
ಊಹೂಂ....
ಯಾವುದೇ ಪರಿವೆ ಇಲ್ಲ
ಎಕೆ ೪೭ರ ಕುದುರೆ ಮೀಟಿ
ಆರ್ಭಟಿಸುವುದೇ ಹವ್ಯಾಸ
ಆಜ್ಞಾಧಾರಕ ರೋಬೋಟ್‌ಗಳಂತೆ
ಜೀನುಕಟ್ಟಿದ ಕುದುರೆಗಳಂತೆ
ಸ್ವರ್ಗ ಕೆಡವಿ ಸದಾ ರೌರವ ನರಕ
ಸೃಷ್ಟಿಯೇ ಗುರಿ
ಅರಳಿದ ಸುಂದರ ಹೂಗಳ ಸಂಹಾರ
ಕಾರ್ಯಕ್ಕೆ ಇವರದೇ ಪೌರೋಹಿತ್ಯ

Wednesday, April 02, 2008

ತಿಂದಿರಾ ಪೊಳಲಿ ಕಲ್ಲಂಗಡಿ?(watermelon of polali)

ಮಂಗಳೂರಿಗೆ ಬಂದವರು ಹೋಗಲೇಬೇಕಾದ ಕೆಲ ಸ್ಥಳಗಳು ಅನೇಕ ಇವೆ. ಮಂಗಳೂರಿನಿಂದ ಸುಮಾರು ೧೨ ಕಿ.ಮೀ ದೂರದಲ್ಲಿರುವ ಪೊಳಲಿಯ ಶ್ರೀ ರಾಜರಾಜೇಶ್ವರಿಯ ದೇವಳ ಅಂತಹ ಸ್ಥಳಗಳಲ್ಲೊಂದು. ಈ ದೇವಳದಲ್ಲೊಂದು ವಿಶೇಷ ಇದೆ.

ಏನ್ ಗೊತ್ತಾ ? ಈ ದೇವಸ್ಥಾನದಲ್ಲಿ ‘ಪೊಳಲಿ ಬಚ್ಚಂಗಾಯಿ’ ಪ್ರಸಾದ.
ಪೊಳಲಿಗೆ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಬರುವವರಿಗೆ ಪೊಳಲಿ ಬಚ್ಚಂಗಾಯಿ(ಕಲ್ಲಂಗಡಿ ಹಣ್ಣು) ಇಲ್ಲಿ ಲಭ್ಯ. ಹಾಗೆಂದ ಮಾತ್ರಕ್ಕೆ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಸಿಗುತ್ತದೆ ಎಂದಲ್ಲ. ಪೊಳಲಿ ದೇವಸ್ಥಾನದ ಬೀದಿ ಬದಿ ಅಂಗಡಿಗಳಲ್ಲಿ ಇಲ್ಲೇ ಬೆಳೆಯಲಾದ ತಾಜಾ ಕಲ್ಲಂಗಡಿ ಲಭ್ಯ.
ಪೊಳಲಿಯ ಕಲ್ಲಂಗಡಿ ಖ್ಯಾತಿ ಪಡೆಯಲು ಪೊಳಲಿ ದೇವಿಯ ಮಡಿಲಲ್ಲಿ ಬೆಳೆಯುವ ಹಣ್ಣು ಎಂಬುದೊಂದು ಕಾರಣವಾದರೆ, ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇರೆ ಯಾವ ಮಣ್ಣಿನಲ್ಲೂ ಇದು ಬೆಳೆಯಲಾರದು ಎಂಬುದೂ ಮಗದೊಂದು ಕಾರಣ.
ವರ್ಷದಿಂದ ವರ್ಷಕ್ಕೆ ಕಲ್ಲಂಗಡಿ ಬೆಳೆಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ ಎನ್ನುತ್ತಾರೆ ಇಲ್ಲಿನ ಹಿರಿಯ ವಾಸುದೇವ ಭಟ್ಟರು. ತಮಗೆ ಸ್ವಂತ ಜಾಗ ಇಲ್ಲದಿದ್ದರೂ ಖಾಲಿ ಇರುವ ಸ್ಥಳದ ಮಾಲೀಕರಿಂದ ಜನವರಿ-ಏಪ್ರಿಲ್ ವರೆಗೆ ಒಪ್ಪಂದದ ಮೇರೆಗೆ ಕೆಲವರು ಕೃಷಿಕರು ಪಡೆದುಕೊಂಡು ಕಲ್ಲಂಗಡಿ ಬೆಳೆಸಿ ಮೊದಲ ಹಣ್ಣನ್ನು ಶ್ರೀ ರಾಜರಾಜೇಶ್ವರಿಗೆ ಒಪ್ಪಿಸಿ ಕೃತಾರ್ಥರಾಗಿ ಮಾರಾಟಕ್ಕೆ ಇರಿಸುತ್ತಾರೆ.
ಇಲ್ಲಿಂದ ಹೊರಕ್ಕೆ ಕಲ್ಲಂಗಡಿ ಹೋಗುವುದಿಲ್ಲ. ಬೆಳೆದದ್ದೆಲ್ಲಾ ಖರ್ಚಾಗಿ ಹೋಗುತ್ತದೆ, ಅದೇ ವಿಶೇಷ. ಬರುವ ಭಕ್ತಾದಿಗಳನ್ನು ಕಲ್ಲಂಗಡಿ ಸೆಳೆದೇ ಸೆಳೆಯುತ್ತದೆ ಎನ್ನುತ್ತಾರೆ ಸ್ಥಳೀಯರಾದ ಯಶವಂತ.
ಪೊಳಲಿಯೆಂದರೆ ದೊಡ್ಡ ಊರೇನಲ್ಲ. ಮಂಗಳೂರಿಂದ ಮೂಡುಬಿದಿರೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ೧೩ರಲ್ಲಿ ಸಾಗಿ ಗಂಜಿಮಠದ ಬಳಿ ಬಲಕ್ಕೆ ಇರುವ ಬೃಹತ್ ದ್ವಾರದಲ್ಲಿ ಒಳಗೆ ಹೋದರೆ ಅಡ್ಡೂರು ಸಿಗುತ್ತದೆ. ಅಲ್ಲೇ ಎಡಕ್ಕೆ ಸಾಗಿದರೆ ಇನ್ನೂ ಹಸಿರು ಹೊದ್ದಿರುವ ಪೊಳಲಿ ಸೇರಬಹುದು.
ಈ ವರುಷ ಮಳೆ ಭಾರಿಯಾಗಿ ಸುರಿದು ಕಲ್ಲಂಗಡಿ ಬೆಳೆಗೆ ನಷ್ಟ ಉಂಟು ಮಾಡಿದೆ. ಶೇ.೪೦ರಷ್ಟು ಬೆಳೆ ಹಾನಿಯಾಗಿದೆ. ಗದ್ದೆಯಲ್ಲಿ ನೀರು ನಿಂತು ಕೊಳೆತು ಹೋಗಿದೆ.
ಆದರೂ ಎಲ್ಲವೂ ದೇವಿಯ ಇಚ್ಛೆ, ಆಕೆಗೆ ಎಷ್ಟು ಬೇಕೋ ಅಷ್ಟನ್ನು ಬೆಳೆಸುತ್ತಾಳೆ ಎನ್ನುತ್ತಾರೆ ೨೫ಕ್ಕೂ ಹೆಚ್ಚು ವರ್ಷದಿಂದ ಇಲ್ಲಿ ಕಲ್ಲಂಗಡಿ ಬೆಳೆಯುತ್ತಿರುವ ಹಿರಿಯರಾದ ನಾರಾಯಣ ಪೂಜಾರಿ. ನೆನಪಿಡಿ ಅವರು ಬೆಳೆಸಿದ ಕಲ್ಲಂಗಡಿ ಪೈಕಿ, ಐದು ಕೆ.ಜಿ ಮೇಲ್ಪಟ್ಟ ನೂರೈವತ್ತಕ್ಕೂ ಹೆಚ್ಚು ಕಲ್ಲಂಗಡಿ ಹಾಳಾಗಿದೆ.

ಬೇಸರ ಎಂದರೆ ಪೊಳಲಿ ತಳಿಯೆಂದೇ ಇದ್ದ ತಳಿಯೊಂದು ಮಾತ್ರ ಕಾಲಾಂತರದಲ್ಲಿ ಕಣ್ಮರೆಯಾಗಿ ಹೋಗಿದೆ, ಈಗ ಹೈಬ್ರಿಡ್ ತಳಿಗಳಾದ ಮಧು, ಭಟ್ನಗರ್‌ನಂತಹ ತಳಿಗಳನ್ನು ಇಲ್ಲಿ ಬೆಳೆಯುತ್ತಾರೆ. ಇಲ್ಲಿನ ಲೋಕಲ್ ತಳಿ ದಶಕಗಳ ಹಿಂದೆಯೇ ಅಳಿದು ಹೋಗಿದೆ, ಅದು ಭಾರೀ ಗಾತ್ರದ್ದಾಗಿತ್ತು ನೋಡಿದ ನೆನಪು ಈಗಲೂ ಇದೆ ಎನ್ನುತ್ತಾರೆ ನಾರಾಯಣ.

ಅದೇನೆ ಇರಲಿ ದೇವಸ್ಥಾನವೊಂದರ ಕಾರಣದಲ್ಲಾದರೂ ದಕ್ಷಿಣ ಕನ್ನಡದಲ್ಲಿ ಕಲ್ಲಂಗಡಿ ಬೇರು ಬಿಟ್ಟಿರುವುದಂತೂ ಅಚ್ಚರಿಯ ಸಂಗತಿ.

Sunday, March 23, 2008

ಶಿರಾಡಿಯ ವೆಂಕಟಗಿರಿ ನೆತ್ತಿಯಲ್ಲಿ(atop shiradi venkatagiri peak)


ಬೆಂಗಳೂರಿಂದ-ಮಂಗಳೂರಿಗೆ ಬರುವವರನ್ನು ಯಾವಾಗಲೂ ಸೆಳೆಯುತ್ತದೆ ಶಿರಾಡಿ ಘಾಟ್‌ನ ಅರಣ್ಯ, ಅಲ್ಲಿನ ಇಕ್ಕೆಲಗಳಲ್ಲಿನ ಹೆಸರೇ ಅರಿಯದ ಗಿರಿ ಶಿಖರಗಳು.
ನಾನೂ ಅನೇಕ ಬಾರಿ ಆ ಗಿರಿಗಳ ಮೇಲೇರುವ ಕನಸು ಕಂಡದ್ದಿದೆ. ಶಿರಾಡಿ ಘಾಟಿಯ ಹಚ್ಚ ಹಸಿರಿನ ಸೆರಗಲ್ಲಿ ಹರಿಯುತ್ತದೆ ಕೆಂಪು ಹೊಳೆ. ಇದೀಗ ಈ ಹೊಳೆಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ ಮಿನಿ ಹೈಡ್ರೋ ಸ್ಥಾವರ ಸ್ಥಾಪನೆಯಾಗಿದೆ, ಒಂದಷ್ಟು ಹಸಿರನ್ನು ಈ ಸ್ಥಾವರ ನುಂಗಿ ಹಾಕಿದ್ದೂ ಇದೆ.
ಆದರೂ ಪ್ರಕೃತಿಯ ಸಹಚರ್ಯ ಬಯಸುವವರಿಗೆ ಶಿರಾಡಿಯ ಕಾಡು ಬೆಟ್ಟ ಯಾವಾಗಲೂ ಚೇತೋಹಾರಿ. ಇಲ್ಲಿಗೆ ನಡೆದು ನೋಡುವ ಕಾರ್ಯಕ್ರಮವೊಂದನ್ನು ಮಂಗಳೂರಿನ ಚಾರಣಿಗ ಮಿತ್ರ ದಿನೇಶ್ ಹೊಳ್ಳ ಆಯೋಜಿಸಿದ್ದರು. ಮಂಗಳೂರಿನಿಂದ ೨೧ ಮಂದಿಯ ತಂಡ ಹೊರಟಿತು ಶಿರಾಡಿಯತ್ತ. ಮಂಗಳೂರಿನಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಹಾಗಾಗಿ ನಾವು ಹೋಗಬೇಕು ಎಂದಿದ್ದ ಶಿಖರ ‘ವೆಂಕಟಗಿರಿ’ ಹೋಗುವುದು ಸಾಧ್ಯವೇ ಎಂಬ ದಿಗಿಲೂ ನಮ್ಮಲ್ಲಿತ್ತು. ಮಳೆ ಇದ್ದರೆ ಗುಂಡ್ಯದ ರೈಲ್ವೇ ಹಳಿಯಲ್ಲಿ ನಡೆಯುವುದು ಎಂದು ನಿರ್ಧರಿಸಿ ಹೊರಟೆವು.

ಅಚ್ಚರಿ ಎಂದರೆ ನಾವು ಶಿರಾಡಿ ತಲಪುವಾಗ ಮಳೆ ಮಾಯ! ಗುಂಡ್ಯದಿಂದ ಬಲಕ್ಕೆ ತಿರುಗಿ ಸುಬ್ರಹ್ಮಣ್ಯಕ್ಕೆ ಹೋಗುವ ದಾರಿಯಲ್ಲಿ ಮುಂದುವರಿದೆವು. ಅಲ್ಲಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆ ಎಡಕ್ಕೆ ಕವಲೊಡೆವ ಸಪುರ ರಸ್ತೆಯ ಸಮೀಪವೇ ಮಹೀಂದ್ರ ಟೆಂಪೊ ನಿಲ್ಲಿಸಿ, ಅಲ್ಲಿಂದ ವೆಂಕಟಗಿರಿಗೇ ಚಾರಣ ಆರಂಭ.
ಮೇ ತಿಂಗಳಾದ್ದರಿಂದ ಇನ್ನೂ ಅಲ್ಲಲ್ಲಿ ಗೇರು ಹಣ್ಣು. ಹಣ್ಣು ತಿಂದು ಬೀಜ ಅಲ್ಲೇ ಇರಿಸಿ ಮುಂದುವರಿದೆವು. ಅಕಾಲಿಕ ಮಳೆಯಾದ್ದರಿಂದ ತೋಡುಗಳಲ್ಲಿ ಕೆನ್ನೀರು ಹರಿಯುತ್ತಿತ್ತು. ಒಣಗಿದ್ದ ಮರಗಳೆಲ್ಲಾ ತೊಳೆದ ಹಾಗೆ ಕಾಣುತ್ತಿದ್ದವು, ಅಲ್ಲಲ್ಲಿ ಮತ್ತೆ ಹಸಿರು ಕಾಣುತ್ತಿತ್ತು. ಊರಿನವರೇ ಆದ ರಾಜಶೇಖರ್ ಅಲಿಯಾಸ್ ರಾಜಣ್ಣ ನಮಗೆ ಲೋಕಲ್ ಗೈಡ್.


ದೂರದಿಂದ ಎತ್ತರದಲ್ಲಿ ನಮ್ಮ ಚಾರಣ ತಾಣ ವೆಂಕಟಗಿರಿಯ ಬೋಳು ನೆತ್ತಿ ಕೈಬೀಸಿ ಕರೆಯುತ್ತಿತ್ತು.
ಸುಮಾರು ಅರ್ಧ ಗಂಟೆಯ ಪ್ರಯಾಣ ಮಾಡಿ ಊರಿನ ಮನೆಗಳ ನಡುವೆ ಸಾಗುತ್ತಾ ಕಾಡಿನ ಮಡಿಲು ಪ್ರವೇಶಿಸಿದ ನಾವು ಮಂಗಳೂರು-ಬೆಂಗಳೂರು ರೈಲ್ವೇ ಟ್ರಾಕ್ ಸೇರಿದೆವು. ಬೃಹತ್ ಸುರಂಗಮಾರ್ಗವೊಂದು ಅಲ್ಲೇ ಇತ್ತು. ಪಕ್ಕದಲ್ಲೇ ನೀರಿನ ತೋಡು.
ಮೋಡ ಕವಿದಿದ್ದರಿಂದ ಎಲ್ಲರಿಗೂ ಬೆವರು. ಅಲ್ಲೇ ಹಳಿಯ ಪಕ್ಕ ಕುಳಿತು ಒಂದಷ್ಟು ದಣಿವಾರಿಸಿದೆವು. ಬೆಂಗಳೂರಿನತ್ತ ಮುಖಮಾಡಿ ನಿಂತರೆ ಅದುರಿಗೆ ಸುರಂಗ, ಅದರ ಎಡ ಪಕ್ಕದಲ್ಲೇ ಒಂದು ಕಾಡು ದಾರಿ ಮುಂದುವರಿಯುತ್ತದೆ, ಅದರಲ್ಲಿ ಸಾಗಿದರೆ ಅರಣ್ಯ ಇಲಾಖೆಯವರು ರಚಿಸಿದ ಕಲ್ಲಿನ ಗುಪ್ಪೆಯೊಂದು ಸಿಗುತ್ತದೆ. ಕಲ್ಲಿನ ಗುಪ್ಪೆಗೆ ಎದುರೇ ಸಿಕ್ಕುವ ಕಾಲು ಹಾದಿಯೇ ನಮ್ಮ ಚಾರಣದ ಹಾದಿ. ದಾರಿಯಲ್ಲಿ ಹೇರಳವಾಗಿ ಕಂಡು ಬಂದದ್ದು ನಮಗೆ ಆನೆ ಲದ್ದಿ, ಆದರೆ ಆನೆ ಮಾತ್ರ ಎಲ್ಲೂ ನೋಡಲು ಸಿಗಲಿಲ್ಲ. ಅಥವಾ ನಮ್ಮ ತಂಡವನ್ನು ನೋಡಿ ಬೆದರಿ ದೂರ ಹೋಗಿರಲೂ ಬಹುದು. ಇದ್ದರೂ ನಮಗೆ ಕಾಣದಿರಬಹುದು. ಆದರೆ ಈ ಭಾಗದಲ್ಲಿ ಆನೆಗಳ ಗುಂಪೇ ಸಂಚರಿಸುತ್ತದೆ ಎಂಬ ಮಾಹಿತಿ ನಮಗೆ ನೀಡಿದ ರಾಜಣ್ಣ.


ಅಗಾಗ ಮಳೆಹನಿ, ತೇವಗೊಂಡ ಹುಲ್ಲು ತುಂಬಿದ ನೆಲ, ಮೇಲೆ ಹೋದಂತೆ ಕಾಡಕಿಚ್ಚು ಬಿದ್ದು ಸುಟ್ಟ ಮರ, ಹುಲ್ಲಿನ ಗಡ್ಡೆ ಕಂಡುಬಂದವು, ಮಳೆಯಾದ್ದರಿಂದ ಮರ, ಹುಲ್ಲು ಮತ್ತೆ ಚಿಗುರತೊಡಗಿದ್ದವು. ಎಡಕ್ಕೆ ನೋಡಿದರೆ ದಟ್ಟ ಅರಣ್ಯ, ಬಲಕ್ಕೆ ನೋಡಿದರೆ ಹತ್ತಿಯಂಥ ಮೋಡ ಹೊದ್ದು ಮುಗುಮ್ಮಾಗಿ ಕುಳಿತಿದೆ ‘ಮುಗಿಲಗಿರಿ’ ಶಿಖರ. ಎಲ್ಲಾ ಕಾಲದಲ್ಲೂ ಒಂದಷ್ಟು ಮೋಡಗಳನ್ನು ತನ್ನ ಹತ್ತಿರವೇ ಇರಿಸುವ ಕಾರಣ ಆ ಹೆಸರು ಪಡೆದುಕೊಂಡಿದೆ ಮುಗಿಲಗಿರಿ ಎಂಬ ಮಾಹಿತಿಕೊಡುತ್ತಾರೆ ದಿನೇಶ್ ಹೊಳ್ಳ.
ಗುಡ್ಡ ಏರುತ್ತಾ ಹೋದಂತೆ ಮರಗಳು ಕಡಮೆಯಾದವು, ಅಲ್ಲೊಂದು ಇಲ್ಲೊಂದು ನೆಲ್ಲಿ ಮರಗಳು. ಕೆಲವದರಲ್ಲಿ ಇನ್ನೂ ನೆಲ್ಲಿಕಾಯಿ ಉಳಿದಿತ್ತು. ನಮ್ಮಲ್ಲಿನ ‘ಹುಡುಗುಬುದ್ಧಿ’ ಕಲ್ಲು ಎಸೆಯುವಂತೆ ಪ್ರೇರೇಪಿಸದೆ ಇದ್ದೀತೇ, ದೊಡ್ಡವರೂ ಚಿಕ್ಕವರಾಗಿ ನೆಲ್ಲಿಕಾಯಿ ಉದುರಿಸಿದೆವು. ನೆಲ್ಲಿಕಾಯಿ ಸವಿಯುತ್ತ, ಅದರ ಮೇಲೆ ನೀರು ಕುಡಿದು ಆ ಸಿಹಿ ಅನುಭವಿಸುತ್ತಾ ಹೋಗುವಾಗ ಆಯಾಸ ಪರಿಹಾರ. ವೆಂಕಟಗಿರಿಯ ತುದಿಯೂ ಹತ್ತಿರವಾಗುತ್ತಿತ್ತು.
ಸುತ್ತ ನೋಡಿದರೆ ಬೇರೆ ಬೇರೆ ಶಿಖರ ಸಾಲು. ಅಮೇದಿಕಲ್ಲು, ಎತ್ತಿನಭುಜ, ಗಡಾಯಿಕಲ್ಲು, ಮಿಂಚುಕಲ್ಲು, ಇನ್ನೂ ಹಲವಾರು, ಕೆಳಗೆ ನೋಡಿದರೆ ಹಾವಿನಂತೆ ಕಾಣುವ ಕೆಂಪುಹೊಳೆ, ಅದರ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ ೪೮.
ಸುಮಾರು ಮೂರು ಗಂಟೆಯ ಚಾರಣ ಸಾಕು ವೆಂಕಟಗಿರಿ ತಲಪಲು. ಶೇ.೯೦ರಷ್ಟು ಸುಲಭ ಚಾರಣವಾದರೆ, ಕೊನೆಯಲ್ಲಿ ಶಿಖರ ತಲಪುವಾಗ ಒಂದಷ್ಟು ಏದುಸಿರು ಖರ್ಚಾಗುತ್ತದೆ!
ಮೇಲೆ ತಲಪಿದರೆ ಬೋಳುಗುಡ್ಡ, ಒಂದೆರಡು ಕಲ್ಲಿನಗುಪ್ಪೆ, ಬಿರುಬೀಸು ಗಾಳಿ, ಅಷ್ಟೇ ಲಭ್ಯ. ಅದು ಬಿಟ್ಟರೆ ಸುತ್ತಲಿನ ಪ್ರಕೃತಿಯ ರಮ್ಯನೋಟ.
ಮಧ್ಯಾಹ್ನದ ಊಟಕ್ಕಾಗಿ ತಂದಿದ್ದ ಮೂಡೆ (moode) ಹೊಟ್ಟೆಗಿಳಿಸಿ, ಮತ್ತೆ ಕೆಳಕ್ಕಿಳಿದೆವು. ಕಲ್ಲುಗಳು ಬುಡ ಹಸಿಯಾದ ಕಾರಣ ಅಲುಗಾಡುತ್ತಿದ್ದು, ಎಚ್ಚರಿಕೆಯಿಂದ ಇಳಿಯಬೇಕಿತ್ತು, ಹಾಗಾಗಿ ಇಳಿಯಲೂ ಅಷ್ಟೇ ಸಮಯ ಬೇಕು.
ಇಳಿಯುವಾಗಲೂ ನಮ್ಮನ್ನು ಆಕರ್ಷಿಸುತ್ತಿದ್ದುದು, ಆ ಕಾಡು, ಆ ಬಿದ್ದ ತರಗೆಲೆ, ಮೋಡ ಕವಿದ ಮುಗಿಲಗಿರಿ, ಬೋಳು ತುದಿಯ ವೆಂಕಟಗಿರಿ.......
ಚಿತ್ರ : ಸುನಿಲ್